ಎಸ್.ಮಂಗಳಾ ಸತ್ಯನ್ ಕನ್ನಡದ ಜನಪ್ರಿಯ ಲೇಖಕಿ. ಇವರು ೧೯೪೦ ಎಪ್ರಿಲ್ ೧೦ರಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಜನಿಸಿದರು. ಇವರು ಇದುವರೆವಿಗೆ ನಲವತ್ತೈದು ಕಾದಂಬರಿಗಳನ್ನೂ ನೂರಐವತ್ತೈದಕ್ಕೂ ಹೆಚ್ಚು ಸಣ್ಣ ಕಥೆಗಳನ್ನೂ ರಚಿಸಿ ಕನ್ನಡದಲ್ಲಿ ತಮ್ಮದೇ ಆದ ಅಪಾರ ಓದುಗ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. == ಕಥೆ, ಕಾದಂಬರಿಗಳ ಲೋಕದಲ್ಲಿ == ಬರವಣಿಗೆಯ ಕ್ಷೇತ್ರದಲ್ಲಿ ಆಸಕ್ತಿ ತಳೆದ ಮಂಗಳಾ ಸತ್ಯನ್ ಅವರು ೧೯೬೮ರ ವರ್ಷದಲ್ಲಿ ಬಿಡುಗಡೆಗೊಂಡ ‘ಹಣದ ಮಗಳು’ ಕೃತಿಯಿಂದ ಮೊದಲ್ಗೊಂಡು ಸುಮಾರು ನಲವತ್ತೈದಕ್ಕೂ ಹೆಚ್ಚು ಕಾದಂಬರಿಗಳನ್ನೂ, ನೂರ ಐವತ್ತಕ್ಕೂ ಹೆಚ್ಚು ಸಣ್ಣ ಕಥೆಗಳನ್ನೂ ರಚಿಸಿ ಕನ್ನಡದಲ್ಲಿ ತಮ್ಮದೇ ಆದ ಅಪಾರ ಓದುಗ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಅವರ ಕಾದಂಬರಿಗಳಾದ ಭಾಗ್ಯಜ್ಯೋತಿ, ಮುಗ್ಧ ಮಾನವ, ಕಾನನದ ಕರುಣಾಳು, ವಿಷದ ಒಡಲು, ಪುತ್ರಕಾಮಿ, ನಿನಗಾಗಿ, ನವವಸಂತ, ಬಂಗಾರ ಭೂಷಿತೆ, ಹೂವೆರಡು ಕೊನೆಯೊಂದು, ವಂಚಿತೆ, ಆ ಮುಖ, ಅರಸಿ ಬಂದವಳು, ಸ್ವರ್ಗ ಸನ್ನಿಧಿ ಅಮೃತಮಯಿ, ಆಶಾದೀಪ, ಪ್ರಣಯ ತಾಂಡವ, ಒಡೆಯದ ಮುತ್ತು, ಶ್ರೀ ಅನ್ನಪೂರ್ಣೇಶ್ವರಿ, ಸಂಜೀವ, ಸ್ವರ್ಣಚಂದ್ರಿಕಾ ಮುಂತಾದ ಕೃತಿಗಳು ಓದುಗ ಬಳಗವನ್ನು ಅಪಾರವಾಗಿ ಆಕರ್ಷಿಸಿವೆ. == ಚಲನಚಿತ್ರಗಳಾದ ಕಾದಂಬರಿಗಳು == ಎಪ್ಪತ್ತರ ದಶಕದಲ್ಲಿ ಚಲನಚಿತ್ರಗಳಾದ ಅವರ ಕೆಲವು ಕಾದಂಬರಿಗಳೆಂದರೆ ಭಾಗ್ಯಜ್ಯೋತಿ, ಮುಗ್ದಮಾನವ ಚಿತ್ರಗಳು ಆ ಕಾಲದಲ್ಲಿ ಇಡೀ ನಾಡಿನಲ್ಲಿ ಜನಪ್ರಿಯಗೊಂಡು ನಾಡಿನಲ್ಲೆಲ್ಲಾ ಮಂಗಳಾ ಸತ್ಯನ್ ಅವರ ಹೆಸರನ್ನು ಮನೆಮಾತಾಗಿಸಿದ್ದವು. ಮುಂದೆ ಅವರ ಕೃತಿಗಳಾದ 'ಆ ಮುಖ', ‘ಬಿಸಿಲು ಬೆಳದಿಂಗಳು’ ಎಂಬ ಹೆಸರಿನಲ್ಲೂ ಮತ್ತು 'ಮುರಳೀಗಾನ ಅಮೃತಪಾನ' ಎಂಬ ಕಥೆ ಅದೇ ಹೆಸರಿನಲ್ಲೂ ಚಲನಚಿತ್ರಗಳಾದವು. ಅವರ ಸೂರ್ಯದಂತಹ ಕೃತಿಗಳು ದೂರದರ್ಶನದ ಧಾರಾವಾಹಿಗಳಾಗಿ ಕೂಡಾ ಜನಪ್ರಿಯಗೊಂಡಿವೆ. == ಚಿತ್ರಕತೆ, ಸಂಭಾಷಣೆ == ಮಂಗಳಾ ಅವರು ಕೆಲವೊಂದು ಚಲನಚಿತ್ರಗಳಿಗೆ ಚಿತ್ರಕತೆ, ಸಂಭಾಷಣೆಯನ್ನು ಕೂಡಾ ರಚಿಸಿದ್ದಾರೆ. ಅವುಗಳು "ಸ್ವಾತಿ" ಮತ್ತು "ಹೂವೊಂದು ಬೇಕು ಬಳ್ಳಿಗೆ" == ಆಕಾಶವಾಣಿ ಕಥಾನಕಗಳು == ಅವರ ಕಥೆಗಳಾದ ‘ಸಂಬಂಧ’, ‘ದೇವರ ಕೂಗು’ ಮತ್ತು ‘ ಸಹಚರ್ಯೆ’ಗಳು ಆಕಾಶವಾಣಿಯ ಕಥಾನಕ ರೂಪಕಗಳಾಗಿ ಮನೆ ಮನೆಯನ್ನು ತಲುಪಿದ್ದವು. == ಕೃತಿಗಳು == === ಕಾದಂಬರಿಗಳು: (ಕೆಲವನ್ನು ಇಲ್ಲಿ ಕೊ‍ಡಲಾಗಿದೆ) === ಭಾಗ್ಯಜ್ಯೋತಿ (ಕನ್ನಡದಲ್ಲಿ ಚಲನಚಿತ್ರನವಾಗಿದೆ) ಮುಗ್ಧ ಮಾನವ (ಕನ್ನಡದಲ್ಲಿ ಚಲನಚಿತ್ರವಾಗಿದೆ) ಕಾನನದ ಕರುಣಾಳು ವಿಷದ ಒಡಲು ಪುತ್ರಕಾಮಿ ನಿನಗಾಗಿ ನವವಸಂತ ಬಂಗಾರ ಭೂಷಿತೆ ಹೂವೆರಡು ಕೊನೆಯೊಂದು ವಂಚಿತೆ ಆ ಮುಖ ("ಬಿಸಿಲು ಬೆಳದಿಂಗಳು" ಹೆಸರಿನಲ್ಲಿ ಕನ್ನಡದಲ್ಲಿ ಚಲನಚಿತ್ರವಾಗಿದೆ) ಹಣದ ಮಗಳು ಅರಸಿ ಬಂದವಳು ಸ್ವರ್ಗಸನ್ನಿಧಿ ಅಮೃತಮಯಿ ಆಶಾದೀಪ ಪ್ರಣಯ ತಾಂಡವ "ಮುರಳೀಗಾನ ಅಮೃತಪಾನ" ಕಾದಂಬರಿಯೂ ಚಲನಚಿತ್ರವಾಗಿದೆ. === ನಾಟಕಗಳು === ಮದ್ವೆ ಮಸಲತ್, ಧೀರೋದ್ಧಾತ ಕಂಸ, ಭೋಜ ಕಾಳಿದಾಸ, ಇವು ಅವರ ನಾಟಕಗಳು. ಮಕ್ಕಳಿಗಾಗಿ ನಾಟಕ ನಿರ್ದೇಶನ ಸಹಾ ಮಾಡಿದ್ದರು. == ಸ್ತ್ರೀಪರ ಕಾಳಜಿಗಳು == ಸಮಾಜದಲ್ಲಿನ ಜಾತಿ ಪದ್ಧತಿ ಮತ್ತು ಸ್ತ್ರೀಯರ ಸಮಸ್ಯೆಗಳ ಬಗೆಗೆ ಅಂತಃಕರಣ ಪೂರಿತ ದೃಷ್ಟಿಯನ್ನು ಕೇವಲ ತಮ್ಮ ಕಥೆಗಳಲ್ಲಷ್ಟೇ ಅಲ್ಲದೆ ತಮ್ಮ ಕ್ರಿಯಾಶಕ್ತಿಯಲ್ಲೂ ಮೆರೆದಿರುವ ಎಸ್. ಮಂಗಳಾ ಸತ್ಯನ್ ಅವರು ನಡೆಸುತ್ತಿರುವ “ಸ್ತ್ರೀ ಶಕ್ತಿ ಮಹಿಳಾ ಪ್ರತಿಷ್ಠಾನ ಟ್ರಸ್ಟ್” ಎಂಬ ಸಂಘಟನೆ ಹಲವಾರು ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಪ್ರತಿಷ್ಟಿತ ಸಂಸ್ಥೆಯಾಗಿದೆ. == ಪ್ರಶಸ್ತಿ ಗೌರವಗಳು == ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಬರಹಗಾರ್ತಿಯರಿಗೆ ಸಲ್ಲುವ ಉಚ್ಚತಮ ಪ್ರಶಸ್ತಿಯಾದ ಅತ್ತಿಮಬ್ಬೆ ಪ್ರತಿಷ್ಠಾನದ ಪ್ರಶಸ್ತಿಯಲ್ಲದೆ, ಸಾಹಿತ್ಯ ರತ್ನ, ಕಾದಂಬರಿ ರತ್ನ, ಮೈಸೂರು ರತ್ನ, ಸಾಹಿತ್ಯ ಕಲಾ ಪ್ರಪೂರ್ಣೆ, ಸಾಹಿತ್ಯ ಕಲಾ ಶಾರದೆ ಮುಂತಾದ ಹಲವು ಗೌರವಗಳೂ, ಹಲವಾರು ಪ್ರತಿಷ್ಟಿತ ಸಾಹಿತ್ಯ ಸಮಾವೇಶಗಳ ಅಧ್ಯಕ್ಷತೆಯ ಹಿರಿಮೆಗಳೂ ಎಸ್. ಮಂಗಳಾ ಸತ್ಯನ್ ಅವರನ್ನು ಅರಸಿ ಬಂದಿದೆ. == ಉಲ್ಲೇಖಗಳು ==